ಮೊನ್ನೆ ಸಂಜೆ ಗ್ರೂಪ್ಪಿನಲ್ಲಿ ಗೆಳೆಯ Pramod ಈ ಫೋಟೋವನ್ನ ಹಾಕಿದ್ದ, ಇದನ್ನ ನೋಡುತ್ತಿದ್ದಂತಲೆ ಭರ್ತಿ ಮಳೆಗಾಲದ ಹೊತ್ತಲಿ ಮೋಡದ ಮರೆಯಿಂದ ಇಣುಕಿದ ಎಳೆಯ ಸೂರ್ಯನ ಕಿರಣಗಳಂತೆ ,ಮನಸ್ಸಿನ ಮರೆಯಿಂದ ಹೈಸ್ಕೂಲಿನ ನೆನಪುಗಳು ಇಣುಕಲಾರಂಭಿಸದವು. ವ್ಹಾ..! ಈ ಮನಸ್ಸೇ ಒಂತರ ವಿಚಿತ್ರ ಯಾವದೋ ಒಂದು ಜಾಗ, ವಸ್ತು, ಊರು, ಬಣ್ಣ, ಬಟ್ಟೆ ,ಹಾಡು ಇನ್ನೂ ಯಾವ ಯಾವುದರಲ್ಲೊ ಸಾಗರದಾಳದಷ್ಟು ನೆನಪುಗಳನ್ನ ಬಚ್ಚಿಟ್ಟುಕೊಂಡುಬಿಟ್ಟಿರುತ್ತೆ.ನಮ್ಮ ಮುಂಡಗೋಡದ ಹೈಸ್ಕೂಲಿನ ಈ ಬ್ಯಾಚ್ ನ ನೋಡುತ್ತಿದ್ದಂತೆಯೇ ಹೈಸ್ಕೂಲಿನ ನೆನಪುಗಳೆಲ್ಲ ಒಮ್ಮೆ ಮಳೆಯಂತೆ ಸುರಿಯಲಾರಂಭಿಸಿದವು.
ಮುಂಡಗೋಡಿನ ನಮ್ಮ ಸರಕಾರಿ ಪದವಿ ಪೂರ್ವ ಕಾಲೇಜು 1965 ರಿಂದ ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರದ ದಾನವನ್ನ ಮಾಡಿ ,ಬದುಕಿನ ಹಾದಿಯನ್ನು ಕಟ್ಟಿ ಕೊಟ್ಟಿದೆ.ಬೆಳಗಿನ ಸಮಯ ಕಾಲೇಜುಗಳು ನಡೆದರೆ ,11 ರ ನಂತರ ಹೈಸ್ಕೂಲಿನ ತರಗತಿಗಳು. ಸುಮಾರು ಹದಿನೈದು ವರ್ಷಗಳ ಹಿಂದೆ ಪ್ರಾಥಮಿಕ 7ನೇ ತರಗತಿಯನ್ನ ಮುಗಿಸಿ ಚಡ್ಡಿ ಬಿಟ್ಟು ಪ್ಯಾಂಟು ಹಾಕಿ ಎಂಟನೇ ತರಗತಿಯಿಂದ ಈ ಶಾಲೆಯಲ್ಲಿ ನನ್ನ ಓದು ಶುರುವಾದದ್ದು. ಒಂದು ಕ್ಲಾಸ್ ಎಂದರೆ ಅಬ್ಬಬ್ಬಾ ಎಂದರು 40 ಜನ ಆದರೆ ಇಲ್ಲಿ ಕಡಿಮೆ ಎಂದರು 350 ವಿದ್ಯಾರ್ಥಿಗಳು . A B C D ಎಂದು ನಾಲ್ಕು ವಿಭಾಗ ಮಾಡಿ ಒಂದೊಂದು ತರಗತಿಯಲ್ಲೂ ಸುಮಾರು 80 ವಿದ್ಯಾರ್ಥಿಗಳನ್ನ ಹಾಕಲಾಗಿತ್ತು.ಇದೊಂತರ ಹಕ್ಕಿಗಳಿಗೆ ಆಲದಮರದಂತಾಗಿತ್ತು.ತಾಲೂಕಿನ ಎಲ್ಲ ಶಾಲೆಗಳಿಂದ ವಿದ್ಯಾರ್ಥಿಗಳು ಬಂದು ಸೇರೋದು ಇಲ್ಲಿಯೇ ಅಲ್ವಾ. ಇದ್ದ ಇಂತಹ ಸ್ಥಿತಿಯಲ್ಲಿ , ಮನೆಯ ಆರ್ಥಿಕ ಪರಿಸ್ಥಿತಿಗೊ ಇನ್ನೊಂದು ಕಾರಣಕೋ ಶಾಲೆ ಬಿಟ್ಟ ವಿದ್ಯಾರ್ಥಿಗಳಿಗಂತು ಲೆಕ್ಕವಿಲ್ಲ.ಹಲವರ ಶಿಕ್ಷಣ ಪ್ರಾಥಮಿಕ ಹಂತದಲ್ಲೇ ಕೊನೆಯಾದರೆ , ಇನ್ನು ಹಲವರದ್ದು ಹೈಸ್ಕೂಲು. ಮುಂಡಗೋಡಿನ ಬಹುಪಾಲು ವಿದ್ಯಾರ್ಥಿಗಳ ಶಿಕ್ಷಣ ಕಾಲೇಜು ಹಂತದಲ್ಲೇ ಕೊನೆಯಾಗಿಬಿಡುತ್ತೆ ಎಂಬುದು ಮುಂಡಗೋಡಿನ ದುರ್ದೈವವೇ ಸರಿ. ಅಂತೂ ಶತಮಾನಗಳಿಂದ ಪ್ರತಿ ವರ್ಷವೂ, ಹೊಸದಾದ ತನ್ನದೇ ಕಥೆಗಳನ್ನ ,ನೆನಪುಗಳನ್ನ, ಪ್ರೀತಿಯನ್ನ, ತನ್ನ ಒಡಲಲ್ಲಿ ಬಚ್ಚಿಟ್ಟುಕೊಳ್ಳುತ್ತ ಸಾಗಿದೆ ನಮ್ಮ ಈ ಸರಕಾರಿ ಪದವಿ ಪೂರ್ವ ಕಾಲೇಜು.
ಒಂದು ಶಾಲೆ ,ಅಲ್ಲಿನ ಶಿಕ್ಷಕರು ಒಂದೇ ಆಗಿದ್ದರು ಕೂಡ ಪ್ರತಿ ವರ್ಷ ಬರುವ ಹೊಸ ವಿದ್ಯಾರ್ಥಿಗಳೊಂದಿಗೆ ಅಲ್ಲಿ ಹೊಸ ಅನುಭವ ಮತ್ತು ಪ್ರತಿ ಭಾರಿಯು ಹೊಸ ಕಥೆಗಳೇ ಶುರುವಾಗಿರತ್ತೆ ಕಾರಣ ಸಮಯ ಬದಲಾಗಿರತ್ತೆ.ಅಂತೆಯೇ ನಮ್ಮದು ಒಂದು ಶಾಲೆ ಒಂದಿಷ್ಟು ನೆನಪಿನ ಮಡಿಕೆಗಳು ಜೀವನದುದ್ದಕ್ಕೂ ಮರೆಯಲಾರೆ.
ಒಂದೇ ಬೆಂಚಿನಲ್ಲಿ ಮೂರು ಜನ ಕೂತು ಜಾಗಕ್ಕೆ ಜಗಳವಾಡುವದು, ಬೆಳಗ್ಗೆ ಬಂದ ಕೂಡಲೇ ನಮ್ಮ ಬೆಂಚನ್ನ ಹುಡಕಾಡಿ ತಂದು ಹೊಂದಿಸಿಕೊಳ್ಳುವದೇ ಆ ದಿನದ ನಮ್ಮ ದೊಡ್ಡ ಸಾಧನೆ. ಯಾಕಂದ್ರೆ ಬೆಳಗ್ಗೆ ನಡೆಯುವ ಕಾಲೇಜಿನ ಸಮಯದಲ್ಲಿ ನಮ್ಮ ಬೆಂಚುಗಳು ಯಾವ ಯಾವದೇ ಕೊಠಡಿಗಳಿಗೆ ರವಾನೆಯಾಗಿ ಬಿಡುತ್ತಿದ್ದವು.ದಿನದ ಮೊದಲ ಕ್ಲಾಸು ,ಕ್ಲಾಸ್ ಟೀಚರ್ ದೇ ಎನ್ನುವ ಅಲಿಖಿತ ನಿಯಮದ ಕಾರಣ ನಮ್ಮ ಕ್ಲಾಸು ವಿಜ್ನ್ಯಾನದ ಕ್ಲಾಸು.ಮೊದಲ ಪಾಠವೇ ಅಯಸ್ಕಾಂತ 😆. ನಮ್ಮ ವಿಜ್ಯ್ನಾನದ ಸರ್ AL ನಾಯ್ಕ್ ಅವರಿಂದ ಏನೂ ಕಲಿತೇನೋ ಬಿಟ್ಟನೋ ಗೊತ್ತಿಲ್ಲ ಆದ್ರೆ ಅವರು ಅವಾಗ ಅವಾಗ ಹೇಳಿದ "ಮನುಷ್ಯನಿಗೆ ಒಂದು ಸಮಯದಲ್ಲಿ ಬಾಲ ಇತ್ತಂತೆ ,ಕಾಲ ಕ್ರಮೇಣ ಅದರ ಅವಶ್ಯಕತೆ ಕಡಿಮೆ ಯಾಗಿ ಅದು ನಶಿಸಿ ಹೋಯಿತಂತೆ .ಈಗ ಮನುಷ್ಯನ ತಲೆಯಲ್ಲಿ ಮೆದುಳು ಅನ್ನೋದ್ ಒಂದಿದೆ ಅದನ್ನ ಸ್ವಲ್ಪನಾದ್ರು ಉಪಯೋಗಿಸಿ ಇಲ್ಲಾಂದ್ರೆ ಮುಂದೆ ಹುಟ್ಟುವ ಮಕ್ಕಳಲ್ಲಿ ಮೆದುಳೆ ಇಲ್ಲದಂತಾಗೋದು" ಈ ಮಾತು ಇದುವರೆಗೂ ಮರೆತಿಲ್ಲ. ಇದೆ ಸರ್ ನಮಗೆ ಬೈದು ಬೈದು ಕ್ಲಾಸಿನ ನಂತರ ಶಾಲೆಯ ಒಳ ಮೈದಾನದಲ್ಲಿ ನೆಟ್ಟ ಸಸಿಗಳಿಗೆ ನೀರು ಹಾಕಿಸ್ತಾ ಇದ್ರು ಅವಾಗೇನೋ ಬೈತಾ ಬೈತಾನೆ ನೀರು ಹಾಕ್ತಿದ್ವಿ ಆದ್ರೆ ಇಂದೂ ಆ ಸಸಿಗಳು ದೊಡ್ಡದಾಗಿದ್ದನ್ನ ನೋಡಿದ್ರೆ ಏನೋ ಒಂದು ಸಂತಸ ಮನಸ್ಸಿಗೆ. ಮೊದಲ ತರಗತಿ ಮುಗಿಯುತ್ತಿದ್ದಂತೆ ಹಿಂದೆ ಮೈದಾನದಲ್ಲಿ ಕ್ರಿಕೆಟ್ ಆಟಗಳು ಶುರುವಾದಾಗ ನಮಗದು ಸಿಗುವ ಫ್ರೀ ಮನೋರಂಜನೆಗೆ ಸಾಟಿ ಯಾವದು..? ಆ ಸಮಯಕ್ಕೆ ಮಾರಾಟಕ್ಕೆ ಬರುವ ಐಸ್ ಕ್ಯಾಂಡಿ ,ನೆಲ್ಲಿಕಾಯಿ,ಸಮೋಸಾಗಳನ್ನ ಕಿಟಕಿಯಿಂದ ಕೊಂಡು ಕದ್ದುಮುಚ್ಚಿ ತಿನ್ನವ ಮಜವೇ ಬೇರೆ.ಮೊಬೈಲಿನ ಯುಗ ಆಗಿನ್ನೂ ಶುರುವಾಗುವ ಹಂತದಲ್ಲಿತ್ತು. ಚಾಲ್ತಿಯಲ್ಲಿ ಇದ್ದದ್ದು ಪ್ರೇಮ ಪತ್ರಗಳೆ.ಯಾರದ್ದೋ ಕವನ ಯಾರದ್ದೋ ಪತ್ರ ಯಾರೋ ಬರೆಯೋರು ಯಾರೋ ಕೊಡೋದು ,ಆ ಪತ್ರ ಇನ್ನೆಲ್ಲೋ ಸೇರಿ ನಡೆಯುವ ರಾದ್ಧಾಂತ ಅಬ್ಬಾ ಒಂದ ಎರಡಾ ಕಥೆಗಳು. ಆಗತಾನೆ ಲಗ್ಗೆಯಿಟ್ಟ ಒಂದೇ ಕಂಪ್ಯೂಟರ್ ನಲ್ಲಿ ಎರಡೂ - ಮೂರು ತಿಂಗಳಿಗೊಮ್ಮೆ ನಡೆಯುವ ಒಂದು ಕ್ಲಾಸಲ್ಲಿ ಒಂದೇ ಕಂಪ್ಯೂಟರ್ ನಲ್ಲಿ ಐದೈದು ಜನ ಕೂತು ಬಣ್ಣ ಹಚ್ಚೋದರಲ್ಲಿ (MS paint) ಸಿಕ್ಕ ಖುಷಿ ಇಂದು, ಇಂದೂ ತೊಡೆಯ ಮೇಲೆ ಇಟ್ಟು ಕೂರುವ ಲ್ಯಾಪಿನಲ್ಲಿ ಸಹ ಸಿಗದು.
ಓದು ಇಲ್ಲಿನ ವಿದ್ಯಾರ್ಥಿಗಳಿಗೆ ಕಷ್ಟವೇ ಆಗಿತ್ತು,ಬಹುತೇಕ ವಿದ್ಯಾರ್ಥಿಗಳು ತಮ್ಮ ಓದಿನ ಖರ್ಚು ವ್ಯಚ್ಚಗಳನ್ನ ತಾವೇ ಭರಿಸಬೇಕಿತ್ತು,ಬೆಳಗಿನ ಪೇಪರ್ ಗಳನ್ನ ಹಾಕವ ಕೆಲಸದಿಂದ ಹಿಡಿದು ಸಂಜೆ ಹೋಟೆಲಿನಲ್ಲಿ ಮಾಡುವ,ಅನೇಕ ಅರೆಕೆಲಸಗಳ ಜೊತೆ ಬೇಸಿಗೆ ರಜೆಗಳಲ್ಲಿ ದಿನದ ಕೂಲಿಯಾಗಿ ದುಡಿದು ತಮ್ಮ ಓದಿನ ಅಗತ್ಯ ದುಡ್ಡನ್ನು ಭರಿಸಿಕೊಳ್ಳಬೇಕಿತ್ತು. ಎಷ್ಟೆಲ್ಲ ಕಷ್ಟಗಳಿದ್ದರು ನಮ್ಮಂತ ಅದೆಷ್ಟೋ ಉಡಾಳರನ್ನ ,ದಡ್ಡರನ್ನ ತಿದ್ದಿ ತೀಡಿ ಪಾಸು ಮಾಡುವಂತೆ ಮಾಡಿ ಮುಂದಕ್ಕೆ ಸಾಗಿ ಹಾಕಿದ ಅಲ್ಲಿನ ಶಿಕ್ಷಕ ಬಳಗಕ್ಕೆ ಎಷ್ಟು ಕೃತಜ್ಞತೆಗಳನ್ನ ಸಲ್ಲಿಸಿದರು ಕಡಿಮೆಯೇ. ಪ್ರತಿಯೊಬ್ಬ ಗುರುಗಳದ್ದು ತನ್ನದೇ ಆದ ಪಾಠ,ಮಾತು ಪ್ರೀತಿ ಹೀಗೆ ವಿಭಿನ್ನ ಶೈಲಿ. ಕಲ್ಯಾಣಶೆಟ್ಟಿ ಸರ್ ಅವರ ಮಾತಿನ ಧಾಟಿಯನ್ನ ನಾವು ಎಂದಾದರೂ ಮರೆಯುವದು ಸಾಧ್ಯವುಂಟಾ..? AL ನಾಯ್ಕ್ ಸರ್ ಗಾಡಿ ಓಡಿಸುವದನ್ನ ನೋಡಿ ಗುಸು ಗುಸು ನಕ್ಕಿದ್ದನ್ನ ಇನ್ನೂ ಮರೆತಿಲ್ಲ, ಭಂಡಾರಿ ಮೇಡಂ ನ ನೋಡಿದಾಗ ಅಂದಿದ್ದಷ್ಟೇ ಭಯ ಇಂದಿಗೂ ಇದೆಯೇನೋ..!ಅವರು ಕಲಿಸಿದ ಗಣಿತದ ಲೆಕ್ಕಗಳಿಗಿಂತ ಭೂಮಿಯ ಮೇಲೆ ಅಂಕಿಗಳು, ಲೆಕ್ಕಗಳು ಹೇಗೆ ಹುಟ್ಟಿಕೊಂಡವು ಎಂಬ ವಿಷಯದ ಬಗ್ಗೆ ಅವರು ಮಾಡಿದ ಮೂರ್ನಾಲ್ಕು ದಿನಗಳ ಆ ಪಾಠ ಇಂದಿಗೂ ಮರೆತಿಲ್ಲ. ವಿಠೋಬ್ ನಾಯ್ಕ್ Vithoba Nayak ಸರ್ ಅವರ ಪಾಠ ಕ್ಕಿಂತಲು ಅವರ ಪ್ರೀತಿಯಿಂದ ನಮ್ಮನ್ನ ಮುಂದಿನ ಜೀವನದ ಬಗ್ಗೆ ಭವಿಷ್ಯದ ಬಗ್ಗೆ ವಿಚಾರ ಮಾಡುವಂತೆ ಮಾಡುವ ಅವರ ಶೈಲಿಯೇ ಚೆಂದವಾಗಿತ್ತು. ಹಿಂದಿಯ ನದಾಫ್ ಸರ್ ಕಲಿಸಿದ ಹಿಂದಿಯ ಪಾಠವಂತು ನೆನಪಿಲ್ಲ, ಆದರೆ ತನ್ನ ಶರ್ಟ್ನ್ ನ ಬಿಚ್ಚಿ ರೈಲನ್ನು ನಿಲ್ಲಿಸಿ ಜನರ ಪ್ರಾಣವನ್ನ ಉಳಿಸಿದ ಆ ಪಾಠವನ್ನ ಅವರು ನಮಗೆ ಅರ್ಥಮಾಡಿಸಲು ಮಾಡಿದ ಸರ್ಕಸ್ ಇಂದು ನೆನಪಾದರೆ ನಗು ಒಮ್ಮೆ ಬಿಕ್ಕಳಿಸಿ ಬರುತ್ತೆ. ಆಟ-ಪಾಠ , ಕಲೆ ಹೀಗೆ ಎಲ್ಲ ವರ್ಗದಲ್ಲಿಯೂ ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಕಡಿಮೆಯೇನಲ್ಲ. ಪ್ರತಿ ವರ್ಷ SSLC ನಲ್ಲಿ ತಾಲೂಕಿನ ಒಂದೆರಡು ನಂಬರ್ ಗಳಲ್ಲಿ ಒಂದಾದರೂ ಈ ಶಾಲೆಯದ್ದು ಇದ್ದೆ ಇರತ್ತೆ.ಇನ್ನೂ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲೂ ಸಾಧನೆಗೈದ ಕ್ರೀಡಾಪಟುಗಳು ಸಂಖ್ಯೆಯೂ ಕೂಡ ದೊಡ್ಡದಿದೆ. ಪ್ರತಿಭಾ ಕಾರಂಜಿಯಿಂದ ಗುರುತಿಸಿಕೊಂಡ ಪ್ರತಿಭೆಗಳಿಗೇನೂ ಕೊರತೆಯಿಲ್ಲ.
ಇಷ್ಟೆಲ್ಲ ನೋವು ನಲಿವುಗಳ ಮಧ್ಯ ಹೈಸ್ಕೊಲಿನ ಆ ಮೂರು ವರ್ಷಗಳನ್ನ ಸಮಯ ನಮ್ಮ ಕೈಯಿಂದ ಕಿತ್ತುಕೊಂಡಿದ್ದು ಗೊತ್ತೇ ಆಗಲಿಲ್ಲ,ಅಂತೂ ಕೊನೆಯ ದಿನ ವಿದಾಯ ಹೇಳುವ ದಿನವೂ ಕೂಡ ನಮ್ಮ ಚೇಷ್ಟೆ ,ತುಂಟಾಟ ನಡೆದೇ ಇತ್ತು .ಕಾಲೇಜಿನ ಆಚೆ ಕಟ್ಟಿದ ಹೊಸ ಕಟ್ಟಡಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭ ನಡೆದು ಒಂದಿಷ್ಟು ಜನ ಹುಡಗ ಹುಡಗಿಯರ ಭಾಷಣದ ಮಧ್ಯೆ ಸುರಿದ ಅವರ ಕಣ್ಣೀರು ಕಂಡು ಗುಸು ಗುಸು ನಕ್ಕ ನಾವು ಇನ್ನೂ ತುಂಟಾಟದಲ್ಲೇ ಮೈ ಮರೆತಿದ್ದೆವು.ಆಫೀಸ್ ರೂಮಿನಲ್ಲಿ ತಮಗೆ ಅಂತ ತಂದುಕೊಂಡ ವಡೆಗಳನ್ನ ಯಾರಿಗೂ ತಿಳಿಯದಂತೆ ಆಫೀಸಿನ ಒಳಹೊಕ್ಕು ನಾನು ನನ್ನ ಮಿತ್ರರು ಕದ್ದು ತಿಂದದ್ದು ಜೀವನಪೂರ್ತಿ ಒಂದು ಮರೆಯಲಾಗದ ನೆನಪು. ಎಲ್ಲವನ್ನೂ ಮುಗಿಸಿ ಮನೆಗೆ ಹೋಗುವ ವರೆಗೂ ಮಿತ್ರರ ಜೊತೆ ನಗುತ್ತಲೇ ಇದ್ದ ನಾನು, ಒಮ್ಮೆ ಮನೆ ಮುಟ್ಟಿದ ಮೇಲೆ ನಾಳೆಯಿಂದ ನನ್ನ ಶಾಲೆ ಇಲ್ಲ ಮುಗಿದೆ ಹೋಯಿತ ಅಂತ ನೆನೆದು ಮನಸ್ಸು ಭಾರವಾಗಿ ಸುಮ್ಮನೆ ಒಂದೆರಡು ಘಂಟೆ ಮಲಗಿಬಿಟ್ಟಿದ್ದೆ. ಈಗೇನೂ ನಮ್ಮದೇ ಜೊತೆ ಕಲೆತ ಮಿತ್ರರು ಅಲ್ಲಿ ಶಿಕ್ಷಕರಾಗಿ ಸೇರಿಕೊಂಡಿದ್ದಾರೆ.ಕೆಲವೇ ದಿನಗಳ ಹಿಂದೆ ಪತ್ರಿಕೆಯಲ್ಲಿ ಓದಿದ ನೆನಪು ಈಗಿರುವ ಹಳೆಯ ಕಟ್ಟಡವನ್ನು ಪೂರ್ತಿಯಾಗಿ ಕೆಡವಲು ಆದೇಶವನ್ನ ನೀಡಿದೆಯಂತೆ ,ಒಮ್ಮೆ ಅದನ್ನ ನೆಲಸಮಗೊಳಿಸುವ ಮೊದಲು ಮತ್ತೊಮ್ಮೆ ನನ್ನ ಮಿತ್ರರ ಜೊತೆಗೂಡಿ ಒಂದು ಸುತ್ತು ಶಾಲೆಯನ್ನ ಸುತ್ತುವ ಆಸೆಯಷ್ಟೇ..!
ಪವನ್ ಹೆಬ್ಬಾರೆ

This comment has been removed by the author.
ReplyDeleteಹಾಯ್ .. ಪವನ ...
ReplyDeleteಚೆನ್ನಾಗಿದೆ ನಮ್ಮ ಮುಂಡಗೋಡದ ಪದವಿ ಪೂರ್ವ ಕಾಲೇಜಿನ ಬರಹ ... ಹಳೆ ನೆನಪೂ ಯಾವತ್ತೂ ಮಧು ಮಧುರವೇ .. ನಾನು ಆ ಕಾಲೇಜಿನಲ್ಲಿ ಕಲಿತಿಲ್ಲ ಆದರೇ , ಬೇರೆ ಶಾಲೆಯಲ್ಲಿ ಕಲಿಯುವಾಗ ನೋಡಿದ್ದೇನೆ , ಕೇಳಿದ್ದೇನೆ ಎಷ್ಟೋ ಬಾರಿ ಬೇಟಿನೂ ಕೊಟ್ಟಿದ್ದೇನೆ .. ಬರವಣಿಗೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ,, ನಿನ್ ಅನುಭವವಾದರೂ ನನಗೂ ಹತ್ತಿರವಾದಂತಿದೆ ..
ಇನ್ನೂ ಹೆಚ್ಚಿನ ಬರವಣಿಗೆ ಗಳೂ ಬ್ಲಾಗ್ ನಲ್ಲಿ ಮೂಡಿ ಬರಲಿ ...
ರಘು
ಧನ್ಯವಾದಗಳು 🙏
Deleteಧನ್ಯವಾದಗಳು 🙏
Delete