2018 ರ ವಿಧಾನಸಭಾ ಚುನಾವಣೆಯಲ್ಲಿ 66290 ಮತಗಳನ್ನು ಪಡೆದು, ಕೇವಲ ಸಾವಿರದ ನಾಲ್ಕನೂರು ಚಿಲ್ಲರೆ ಮತಗಳ ಅಂತರದಿಂದ ಚುನಾವಣೆಯಲ್ಲಿ ಗೆದ್ದು ತಮ್ಮ ಕುರ್ಚಿಯನ್ನ ಭದ್ರವಾಗಿಸಿಕೊಂಡಿದ್ದೀರಿ.ಭಿನ್ನಮತದ ಮಹಾಸ್ಫೋಟವೋ ಅಥವಾ ಇನ್ನೊಂದು ಕಾರಣವೋ ತಮ್ಮನ್ನ ಸಾಕಿ ಬೆಳೆಸಿದ ಪಕ್ಷವನ್ನ ತ್ಯಜಿಸಿ,ಗೆದ್ದು ಬಂದ ಕುರ್ಚಿಗೆ ರಾಜಿನಾಮೆಯನ್ನ ನೀಡಿ, ತಮ್ಮ ರಾಜಕೀಯದ ಜೀವನವನ್ನ ದಾವೆಗೆ ಹಚ್ಚಿ 2019ರ ಉಪಚುನಾವಣೆಗೆ ತಯಾರಾದ್ರಿ ,ನಿಮ್ಮ ಕ್ಷೇತ್ರದ ಜನ ನಿಮ್ಮ ಕೈ ಬಿಡಲಿಲ್ಲ 80442 ಮತಗಳನ್ನು ಪಡೆಯುವ ಮೂಲಕ ಭರ್ಜರಿ 31 ಸಾವಿರದ ಚಿಲ್ಲರೆ ಅಂತರದಿಂದ ಜಯಭೇರಿಯನ್ನ ಬಾರಿಸಿದ್ರಿ. ಅಲ್ಲಿಂದ ಮುಂದಕ್ಕೆ ತಾವು ಮುಟ್ಟಿದ್ದೆಲ್ಲ ಚಿನ್ನವೇ ಎಂಬುವಂತೆ ಪಟ್ಟಣ ಪಂಚಾಯತ್ ನಿಂದ ಹಿಡಿದು ಗ್ರಾಮ ಪಂಚಾಯತ್ ವರೆಗೂ ತಮ್ಮ ನೇತೃತ್ವದಲ್ಲಿ ಗೆಲುವಿನ ನಾಗಾಲೋಟವನ್ನೇ ನಡೆಸುತ್ತಾ ಸಾಗಿದ್ದೀರಿ.ಇಷ್ಟೆಲ್ಲ ನೀಡಿದ ನಿಮ್ಮ ಕ್ಷೇತ್ರದ ಮತದಾರನಿಗೆ ತಾವು ಏನನ್ನು ಮಾಡಿದ್ದೀರಿ ಎಂಬುದನ್ನು ಎಂದಿಗಾದರು ತಮ್ಮನ್ನು ತಾವು ಪರಾಮರ್ಶಿಸಿಕೊಂಡಿದ್ದಿರ..? ತಮಗೆ ಎಲ್ಲವನ್ನು ಕೊಟ್ಟ ಮತದಾರನ ಗೋಳನ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೀರಾ..? ನಿಜಕ್ಕೂ ನಿಮ್ಮ ಕ್ಷೇತ್ರದ ಮತದಾರ ಸಂತುಷ್ಟನಾಗಿದ್ದಾನ..?
ಈ ಸುಣ್ಣ ಮತ್ತು ಬೆಣ್ಣೆಯ ಆಟವನ್ನ ಮುಂಡಗೋಡಿನ ಮತದಾರ ದೇಶಪಾಂಡೆಯವರ ಕಾಲದಿಂದಲೂ ನೋಡುತ್ತಾ ನೋಡುತ್ತಾ ರೋಸಿ ಹೋಗಿದ್ದಾನೆ ,ಅಭಿವೃದ್ಧಿಯಿಂದ ಹಿಡಿದು ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಮುಂಡಗೋಡ ಕುಂಟು ಕುದುರೆಯ ಹಾಗೆ ಕುಂಟುತ್ತಲೇ ಸಾಗಿದೆ. ನಮ್ಮ ದುರಾದೃಷ್ಟಕ್ಕೆ ದೂರದ್ರಷ್ಟಿಯುಳ್ಳ ನಾಯಕ ,ಮುಂಡಗೋಡವನ್ನ ಎಲ್ಲಾ ರೀತಿಯಿಂದಲೂ ಸಕ್ಷಮಗೊಳಿಸುವಂತೆ ಕನಸು ಕಂಡು ನಿಶ್ಚಿತ ಗುರಿಯೊಂದಿಗೆ ಕೆಲಸ ಮಾಡುವ ನಾಯಕ ನಮಗೆಂದಿಗೂ ದೊರಕಲೆ ಇಲ್ಲ. ದೊಡ್ಡ ದೊಡ್ಡ ಕನಸಗಳು ದೂರದ ಮಾತು ಮೂಲಭೂತ ಸೌಕರ್ಯಗಳೇ ಸರಿಯಾಗಿ ದೊರಕದೆ ಕ್ಷೇತ್ರದ ಮತದಾರ ಇಂದಿಗೂ ಪರದಾಡುತ್ತಿದ್ದಾನೆ.ಇಷ್ಟು ವರ್ಷಗಳಿಂದ ಕನಿಷ್ಠ ವಾರಕ್ಕೆರಡು ಬಾರಿ ನೀವೇ ಸಂಚರಿಸುವ ನಿಮ್ಮದೇ ಕ್ಷೇತ್ರದ ಯಲ್ಲಾಪುರ - ಮುಂಡಗೋಡ ರಸ್ತೆಯ ಅವಸ್ಥೆಯನ್ನ ಕಂಡು ಇದನ್ನ ಸರಿಪಡಿಸಬೇಕೆಂದು ಯಾವತ್ತಿಗೂ ನಿಮಗೆ ಅನಿಸಲೇ ಇಲ್ವಾ..? ಇದೆ ರಸ್ತೆಯ ಕಾರಣಕ್ಕೆ ಪಕ್ಷದ ಯುವ ಕಾರ್ಯಕರ್ತನೊಬ್ಬ ಪ್ರಾಣಬಿಟ್ಟನಲ್ಲ ಆ ರಸ್ತೆ ಈಗಲೂ ಸಹ ಅಷ್ಟೇ ಖರಾಬಾಗಿದೆ ,ಮುಂಡಗೋಡವನ್ನ ಸಂಪರ್ಕಿಸುವ ಯಾವ ರಸ್ತೆ ಸುಸಜ್ಜಿತವಾಗಿ ,ಸಂಚರಿಸಲು ಯೋಗ್ಯವಾಗಿದೆ ಹೇಳಿ..? ರಸ್ತೆಯ ಕಥೆ ಹೀಗಾದರೆ ಬೀದಿ ದೀಪಗಳನ್ನ ಸರಿಪಡಿಸಬೇಕೆಂದು ಪತ್ರಿಕೆಗಳು ಸುದ್ದಿ ಮಾಡಬೇಕು ,ಜನರು ಬಾಯಿ ಬಾಯಿ ಬಡೆದುಕೊಂಡರು ಯಾರೊಬ್ಬನು ಸಹ ಕ್ಯಾರೆ ಎನ್ನಲಿಲ್ಲ .ಇನ್ನೂ 24×7 ನೀರಿನ ಯೋಜನೆ ಸಂಪೂರ್ಣವಾಗಿ ವಿಫಲವಾಗಿದ್ದು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಂಡಗೋಡಿನ ಯಾವುದೇ ಸರಕಾರಿ ಕಚೇರಿಯಲ್ಲಿ ಅದ್ಯಾವುದೇ ಕೆಲಸಕ್ಕೆ ಅದ್ಯಾರೆ ಹೋದರು ಸಹ ಮರಳಿ ಬರುವಾಗ ಹಿಡಿ ಶಾಪ ಹಾಕುತ್ತಲೇ ಮರಳಿ ಬರುತ್ತಾನೆಂದರೆ ಅದ್ಯಾವ ಪರಿಯ ವಾತಾವರಣ ಅಲ್ಲಿ ಸ್ರಷ್ಟಿಯಾಗಿರಬೇಕು ನೀವೇ ಸ್ವಲ್ಪ ಯೋಚಿಸಿ ನೋಡಿ.ಇನ್ನು ಮುಂಡಗೋಡಿನ ಬಸ್ ಸ್ಟಾಂಡ್ ನಿರ್ಮಾಣದಲ್ಲಿ ನಿಮ್ಮ ಪಾತ್ರ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದಿದ್ದೇ ಇದೆ ಬಿಡಿ.ಇವೆಲ್ಲ ಅಗತ್ಯ ಹಾಗೂ ಮೂಲಭೂತ ಸೌಕರ್ಯಗಳೇ ,ಮಾಡಲು ಕಷ್ಟ ಸಾಧ್ಯ ಎನ್ನುವಂತಹದ್ದು ಯಾವುದು ಇಲ್ಲ .ನಿಮ್ಮ ಟೇಬಲ್ ಮೇಲಿನ ಬಿಸಿ ಬಿಸಿ ಕಾಫಿ ಕಪ್ಪು ತಣ್ಣಗಾಗುವುದರ ವೇಳೆಗೆ ತಾವಿದನ್ನ ಸರಿ ಪಡಿಸಿಬಿಡಬಹುದು.ಇವಿಷ್ಟೇ ಕೆಲಸಗಳನ್ನು ಮಾಡಿದ್ರು ಸಾಕು ಮುಂಡಗೋಡಿಗರ ಪಾಲಿಗೆ ತಾವು ಅಸಲಿ ಹೀರೊ ಆಗಿಬಿಡ್ತೀರಿ ಮಾನ್ಯ ಹೆಬ್ಬಾರ್ ಅವರೇ ಒಮ್ಮೆ ಯೋಚಿಸಿ ನೋಡಿ ಈ ದಿಕ್ಕಿನತ್ತ.
ಒಂದು ಪ್ರದೇಶವನ್ನ ಬೆಳೆಸಬೇಕು ಸುಧಾರಿಸಬೇಕು ಅಂತಾದರೆ ಎಲ್ಲಕ್ಕಿಂತ ಮೂಲ ಅಗತ್ಯದಲ್ಲಿ ಅಲ್ಲಿಯ ಜನರಿಗೆ ನೀಡಬೇಕಿರುವುದು ಶಿಕ್ಷಣವನ್ನ ,ಜನ ಶಿಕ್ಷಿತರಾದರೆ ಮಿಕ್ಕೆಲ್ಲ ಕೆಲಸಗಳು ಸ್ವಯಂ ಚಾಲಿತವಾಗಿ ತನ್ನಷ್ಟಕ್ಕೆ ತಾನೇ ನಡೆಯುತ್ತ ಹೊರಟು ಬಿಡುತ್ತವೆ ,ಸಂಘದಲ್ಲಿ ಶಿಕ್ಷಣ ಪಡೆದು ಬೆಳೆದು ಬಂದ ತಮಗೆ ಈ ವಿಷಯ ತುಂಬಾ ಚೆನ್ನಾಗಿ ತಿಳಿದಿದೆ ಅಂತ ಅನ್ಕೊಂತಿನಿ.ಎಲ್ಲಕ್ಕಿಂತ ಮೊದಲು ಶಿಕ್ಷಣವಾದರೆ ಕ್ರಮವಾಗಿ ಆರೋಗ್ಯ ,ಕ್ರೀಡೆ ,ಧಾರ್ಮಿಕ ಮತ್ತು ಕಲೆ ಅಥವಾ ಸಾಂಸ್ಕ್ರತಿಕ ಇವುಗಳೆಲ್ಲವು ವ್ಯವಸ್ಥಿತವಾಗಿ ನಡೆಯುವಾಗ ಮಾತ್ರ ಒಂದು ಪ್ರದೇಶ ವ್ಯವಸ್ಥಿತವಾಗಿ ಬೆಳೆದು ನಿಂತು ತನ್ನ ಛಾಪನ್ನು ಮೂಡಿಸಲು ಸಾಧ್ಯ.
ಶಿಕ್ಷಣದಲ್ಲಿ ವಿಚಾರ ಮಾಡಿದಾಗ ಮುಂಡಗೋಡ ಬಹು ಹಿಂದಕ್ಕೆ ನಿಂತು ಬಿಟ್ಟಿದ್ದೆ ,ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣವನ್ನ ಅರ್ಧಕ್ಕೆ ಮೊಟಕುಗಳಿಸಿದರೆ ಇನ್ನುಳಿದವರಿಗೆ ಬೇರೆ ಆಯ್ಕೆಗಳೇ ಇಲ್ಲ ,ಪಟ್ಟಣದಲ್ಲಿ ಇರುವ ಸರ್ಕಾರಿ ಕಾಲೇಜಿನಲ್ಲಿ ,ಹೈಸ್ಕೂಲು ಹಾಗೂ ಕಾಲೇಜಿನ ವಿದ್ಯಾರ್ಥಿಗಳನ್ನ ಲೆಕ್ಕ ಹಾಕಿದರೆ ವರ್ಷಕ್ಕೆ ಸುಮಾರು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಾ ಇದ್ದಾರೆ ನಾವು ಕಲೆಯುತ್ತಿರುವಾಗಲೆ ಒಂದು ಡೆಸ್ಕ್ ಗೆ ಮೂರು ಜನ ಕೂತು ಕಲೆತಿದ್ದಿವೆ ಇನ್ನೂ ಈಗಿರುವ ಪರಿಸ್ಥಿತಿಯನ್ನ ನೀವೇ ಅವಲೋಕಿಸಬೇಕು.ಮುಂಡಗೋಡಿನಲ್ಲಿ ಐಟಿಐ ಮತ್ತು ಡಿಪ್ಲೊಮಾ ಕಾಲೇಜುಗಳು ಇರುವುದೇನೋ ನಿಜ ಆದರೆ ಅಲ್ಲಿ ಸಕಲ ವ್ಯವಸ್ಥೆಯು ಸರಿಯಾಗಿದೆಯ..? ಅಲ್ಲಿಂದ ಕಲೆತು ಆಚೆ ಬಂದ ವಿದ್ಯಾರ್ಥಿಗಳು ಈಗಿನ ಕಾಲಮಾನಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಬಹುದ ಖಂಡಿತವಾಗ್ಲೂ ಇಲ್ಲ.ಕೇವಲ ಕಾಲೇಜನ್ನು ಕಟ್ಟಿ ಉದ್ಘಾಟನೆ ಮಾಡಿದ್ರೆ ಕೆಲಸ ಮುಗಿಯಲಿಲ್ಲ ಚಾಲೆಂಜ್ ಆಗಿ ಸ್ವೀಕರಿಸಿ ಅಲ್ಲಿ ಬೇಕಾಗಿರುವ ಸಕಲ ಸಲಕರಣೆಗಳನ್ನು ಒದಗಿಸಿ ಉತ್ತಮ ಮೇಲ್ದರ್ಜೆಗೆ ಮಾರ್ಪಡಿಸಿ ಕಾಲೇಜುಗಳನ್ನ ಕರ್ನಾಟಕದಲ್ಲೇ ನಂಬರ್ ಒನ್ ಮಾಡಿ ಇಲ್ಲಿಂದ ಕಲೆತು ಹೋದಂತಹ ವಿದ್ಯಾರ್ಥಿಗಳು ಸದ್ದು ಮಾಡಲು ಶುರುಮಾಡಿ ನಿಮ್ಮ ಒಂದಿಷ್ಟು ಪ್ರಯತ್ನದಿಂದ ಒಂದೆರಡು ಒಳ್ಳೆಯ ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್ ಗೆ ಅಂತ ಬರಲು ಶುರುಮಾಡಿ ಉದ್ಯೋಗಗಳು ಸ್ರಷ್ಟಿಯಾದರೆ ಅಲ್ಲಿಗೆ ಅದು ಸಾರ್ಥಕವಾಗತ್ತೆ.
ನೀವು ಕೆಲಸ ಮಾಡುತ್ತಿಲ್ಲ ಅಂತ ಹೇಳ್ತಿಲ್ಲ ಆದ್ರೆ ಮಾಡುವ ಕೆಲಸ ಇನ್ನೂ ಸಾಕಷ್ಟಿದೆ ಅಂತ. ಸ್ವಾತಂತ್ರ್ಯದ ನಂತರ ಇಷ್ಟೊಂದು ವರ್ಷಗಳು ಕಳೆದರೂ ಸಹ ನಾವಿನ್ನೂ ಮೂಲಭೂತ ಸೌಕರ್ಯಗಳಿಗೆ ಹೋರಾಡುವ ಪರಿಸ್ಥಿತಿ ಇದೆಯಲ್ಲ ಇದಕ್ಕಿಂತ ಖೇದಕರ ಸಂಗತಿ ಮತ್ತೊಂದಿಲ್ಲ.ನಾವು ಇಲ್ಲಿಂದ ಮುಂದಕ್ಕೆ ಹೋಗೋದು ಯಾವಾಗ..? ಕಳೆದೆರಡು ವರ್ಷಗಳಿಂದ ಕೋರೊನಾ ತಂದೊಡ್ಡಿದ ಸವಾಲು ಬಹು ಕಷ್ಟಕರವಾಗಿತ್ತು ,ಇಂತಹ ಕಠಿಣ ಸಮಯದಲ್ಲೂ ತಾವು ಆ ಸವಾಲುಗಳನ್ನೆಲ್ಲ ಎದುರಿಸಿ ನಿಂತು ತಮ್ಮ ಕ್ಷೇತ್ರದ ಜನತೆಗೆ ಜೊತೆಯಾಗಿ ನಿಂತಿದ್ದೀರಿ.ಕಷ್ಟ ಅಂತ ಬಂದವರ ಕೈ ಯಾವತ್ತಿಗೂ ಬಿಟ್ಟಿಲ್ಲ , ನಿಮ್ಮ ಗಮನಕ್ಕೆ ಬಂದ ಸಮಸ್ಯೆಗಳಿಗೆ ನೀವು ತತ್ ಕ್ಷಣ ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೀರಿ,ಇತ್ತೀಚಿಗೆ ಆಧಾರ್ ಕಾರ್ಡ್ ಸಮಸ್ಯೆಗೆ ತುರ್ತಾಗಿ ತಾವು ತೆಗೆದುಕೊಂಡ ಕ್ರಮವೇ ಸಾಕ್ಷಿ.ಒಂದು ಕ್ಷೇತ್ರದ ನಾಯಕನಲ್ಲಿರುವ ಅವಶ್ಯ ಗುಣಗಳು ನಿಮ್ಮಲ್ಲಿವೆ.ಆದರೆ ಒಂದಿಷ್ಟು ದೂರದ್ರಷ್ಟಿಯ ಯೋಜನೆಗಳನ್ನು ಕೈಗೆತ್ತಿಕೊಂಡು ಅದಕ್ಕಾಗಿ ಕೆಲಸ ಮಾಡಿ.ನಾವು ಹೆಚ್ಚೇನೂ ಕೇಳುತ್ತಿಲ್ಲ ಶಿಕ್ಷಣ ಕ್ಷೇತ್ರಕ್ಕೆ ಬೇಕಾದ ಸಕಲ ಸೌಕರ್ಯಗಳನ್ನು ಮಾಡಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚುಸಿ ,ಯಾವುದಾದ್ರು ದೊಡ್ಡಮಟ್ಟದ ಇನ್ಸ್ಟಿಟ್ಯೂಟ್ ಗಳು ತರುವುದಕ್ಕೆ ಅಗತ್ತ ಒಮ್ಮೆ ಪ್ರಯತ್ನ ಮಾಡಿ.ಯಾವುದೇ ಒಬ್ಬ ವಿದ್ಯಾರ್ಥಿಗಳು ಅರ್ಧಕ್ಕೆ ಶಾಲೆ ಬಿಡಲಾರದಂತೆ ಒಂದು ವ್ಯವಸ್ಥೆ ರೂಪಿಸಿ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಿ.ಇನ್ನು ರಸ್ತೆ ,ಚರಂಡಿ ,ವಿದ್ಯುತ್ ಇವುಗಳಲ್ಲಿ ಯಾವುದೇ ರಾಜಿ ಬೇಡ ,ಓಮ್ಮೆ ಇವುಗಳ ಸಮಸ್ಯೆ ಸರಿಯಾಗಿ ಬಿಡಲಿ,ಯಾವುದೇ ಸರ್ಕಾರಿ ಅಥವಾ ಇಲಾಖೆಗಳಲ್ಲಿ ಜನರ ಕೆಲಸಗಳನ್ನು ಸಲೀಸಾಗಿ ಆಗುವಂತೆ ನೋಡಿಕೊಳ್ಳಿ ಇದರಿಂದ ಜನ ಹಗಲು ರಾತ್ರಿ ಸರ್ಕಾರಿ ಕಛೇರಿಗಳಿಗೆ ಅಲೆಯುವುದು ತಪ್ಪಿ ಜನ ನಿಶ್ಚಿಂತೆಯಿಂದ ಇರುವಂತಾಗಲಿ.ಪಟ್ಟಣದ ಅಮ್ಮಾಜಿ ಕೆರೆ ಅದು ಮುಂಡಗೋಡಿನ ಪ್ರಾಕೃತಿಕ ಸೌಂದರ್ಯವನ್ನು ಹೆಚ್ಚಿಸುತ್ತೆ ಅದರ ಸುಧಾರಣೆಗಾಗಿ ಕೆಲಸಗಳಾಗಲಿ.ದೊಡ್ಡ ದೊಡ್ಡ ಕೈಗಾರಿಕೆಗಳು ಬೇಕು ಅಂತ ಕೇಳುತ್ತಿಲ್ಲ ,ಚಿಕ್ಕ ಪುಟ್ಟ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿ ಬೆಂಬಲಿಸಿ ಅವರ ಪ್ರಾಡಕ್ಟ್ ಗಳಿಗೆ ನೀವೇ ಬ್ರಾಂಡ್ ಅಂಬಾಸಿಡರ್ ಆಗಿ. ಇನ್ನು ಬಸ್ ಸ್ಟಾಂಡ್ ವಿಚಾರದಲ್ಲಂತೂ ಜನ ರೋಸಿ ಹೋಗಿದ್ದಾರೆ ,ತಾಳ್ಮೆಯ ಕಟ್ಟೆ ಒಡೆದು ಹೋಗಿದೆ ಈ ವಿಚಾರದಲ್ಲಿ ಆದಷ್ಟು ಬೇಗ ಇದನ್ನೊಂದು ಮಾಡಿ ಮುಗಿಸಿಬಿಡಿ.ಆಶ್ರಯ ಯೋಜನೆಯಲ್ಲಿ ಮನೆಗಳನ್ನ ಅರ್ಧ ಕಟ್ಟಿಕೊಂಡು ,ದುಡ್ಡು ಬರುತ್ತದೆ ಅಂತ ಸಾಲ ಮಾಡಿ ಜನ ಪರಿತಪಿಸುತ್ತಿದ್ದಾರೆ ಇದಕ್ಕೊಂದು ನಿಶ್ಚಿತ ಪರಿಹಾರ ಆಗಲೇಬೇಕು.ಸ್ವಲ್ಪ ಸಹಾಯ ಹಾಗೂ ಸರಿಯಾದ ಮಾರ್ಗದರ್ಶನ ಸಿಕ್ಕರೆ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಹ ಕ್ರೀಡಾಳುಗಳು ನಮ್ಮಲ್ಲಿ ಇದಾರೆ ಯಾವುದಾದ್ರು ಒಂದು ನಿಧಿಯಿಂದ ಅವರಿಗೆ ಬೇಕಾದ ಸೌಲಭ್ಯಗಳು ದೊರೆಯುವಂತಾಗಲಿ.
ಅಬ್ಬಾ ಹೇಳಿದ್ದೆಲ್ಲ ತುಸು ಜಾಸ್ತಿ ಆಯಿತ ಅಂತ..! ಪರವಾಗಿಲ್ಲ ಆಗದಿರುವ ಕೆಲಸಗಳನ್ನ ನಾನೇನು ಹೇಳಿಲ್ಲ,ಜನರಗಿರುವ ಸಮಸ್ಯೆಗಳನ್ನ ತಮ್ಮ ಮುಂದೆ ಬಿಚ್ಚಿ ಇಡ್ತಾ ಇದ್ದೇನೆ ಅಷ್ಟೆ ,ಇಂತವೆಲ್ಲ ಕೆಲಸ ಮಾಡಲು ಸಮಯ ತುಸು ಹೆಚ್ಚೇ ಬೇಕು ನಿಜ ,ನೀವೊಬ್ಬ ಪ್ರಭಾವಿ ರಾಜಕಾರಣಿ ಅನ್ನುವದರಲ್ಲಿ ಎರಡು ಮಾತಿಲ್ಲ , ನಿಮ್ಮ ನಂತರವು ಸಹ ನಿಮ್ಮ ಕೆಲಸಗಳು ಮಾತನಾಡುವಂತಿರಬೇಕು. ನಾನೇನು ವಿರೋಧ ಪಕ್ಷದವನಲ್ಲ ,ಸ್ವಪಕ್ಷ ದವನೂ ಅಲ್ಲ ,ಅಪ್ಪಟ ಮುಂಡಗೋಡಿಗ ನನ್ನೂರಿನ ಬಗ್ಗೆ ನನಗೆ ಅಪಾರವಾದ ಪ್ರೀತಿ ಇದೆ ,ಹಂಗೆ ಸಾಕಷ್ಟು ಕನಸುಗಳು ಸಹ ಇವೆ ಅವುಗಳಲ್ಲಿ ಒಂದಿಷ್ಟು ನಿಮ್ಮ ಗಮನಕ್ಕೆ ತಂದಿದ್ದೇನೆ ನೀವು ನಮ್ಮ ಕ್ಷೇತ್ರದ ನಾಯಕರು ಎಂಬ ಕಾರಣಕ್ಕೆ. ನಿಮ್ಮ ಗಮನಕ್ಕೆ ಬಂದ ಸಮಸ್ಯೆಗಳಿಗಾಗಿ ಕೆಲಸಗಳನ್ನು ನೀವು ನಿರ್ವಹಿಸುತ್ತೀರಿ ಎಂಬ ನಂಬಿಕೆಯ ಕಾರಣಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಕ್ಷೇತ್ರದ ಜನ ನಿಮ್ಮಿಂದ ಇಟ್ಟುಕೊಂಡ ನೀರೀಕ್ಷೆಗಳು ಏನೂ ಎಂಬುದು ನಿಮ್ಮ ಗಮನಕ್ಕೆ ಬರಲಿ ಎಂಬ ಕಾರಣಕ್ಕೆ..ಈ ಎಲ್ಲ ಕೆಲಸಗಳನ್ನು ನೀವು ಮಾಡಿ ಮಾಡದೆ ಇರಿ ಜನ ನಿಮ್ಮ ಕೈಯಂತೂ ಬಿಡುವದಿಲ್ಲ.ಅದಲ್ಲದೆ ಬೇರೆ ಆಯ್ಕೆಯೂ ಸಹ ಜನರ ಹತ್ತಿರವಿಲ್ಲವಲ್ಲ.
ಪವನ್ ಹೆಬ್ಬಾರೆ
ಮುಂಡಗೋಡ.