Total Pageviews

Sunday, August 22, 2021

ಈ ಬಾರಿ ಮತದಾರ ನಿಜಕ್ಕೂ ಗೊಂಧಲಕ್ಕೆ ಒಳಗಾಗಿ ಬಿಟ್ಟಿದ್ದಾನೆ.ಯಾಕೆ ಗೊತ್ತಾ..?

ಚುನಾವಣೆ ಬಂತೆಂದರೆ ಸಾಕು ಪೂರ್ತಿ ನಗರದ ತುಂಬೆಲ್ಲ ಅದೇನೋ ಸಂಚಲನವೊಂದು ಶುರುವಾಗಿಬಿಡತ್ತೆ , ಅದರಲ್ಲೂ ಈ ಪಟ್ಟಣದ ವಾರ್ಡುಗಳ ಚುನಾವಣೆ ಬಂತೆಂದರೇ ಸಾಕು ಈ ಸಂಚಲನ ತುಸು ಜೋರಾಗಿಯೇ ಇರತ್ತೆ. ನಮ್ಮ ಪಾರ್ಟಿ ನಿಮ್ಮ ಪಾರ್ಟಿ , ಪಕ್ಷೇತರ ಈ ಅಭ್ಯರ್ಥಿ ಆ ಅಭ್ಯರ್ಥಿ ಹೀಗೆ ಗಲ್ಲಿಯ ಪ್ರತಿ ತಿರುವಿನ ವ್ಯಕ್ತಿಯು ಕೂಡ ವಿಮರ್ಶಕನಾಗಿ ಬಿಡುತ್ತಾನೆ. ಟಿಕೆಟುಗಳನ್ನ ಕೊಡುವ ಮತ್ತು ಕೊಡಿಸುವ ಭರಾಟೆ ಜೋರಾಗಿಯೇ ನಡೆಯುತ್ತೆ , ಟಿಕೆಟ್ ಸಿಕ್ಕ ಅಭ್ಯರ್ಥಿಯಂತೂ ಅದ್ಯಾವ ಪರಿ ಹುಮ್ಮಸ್ಸಿನಲ್ಲಿರುತ್ತಾನೆಂದರೆ ಆತ ಗೆದ್ದು ಬಂದ ಒಂದೆರಡು ವರ್ಷಗಳಲ್ಲಿಯೇ ತನ್ನ ವಾರ್ಡಿನ ಎಲ್ಲ ಸಮಸ್ಯೆಗಳನ್ನ ಬಗೆಹರಿಸಿಬಿಡುತ್ತೇನೆ ಎನ್ನುವಷ್ಟು. ನಿಜವಾಗಿಯೂ ಎಷ್ಟೋ ಅಭ್ಯರ್ಥಿಗಳಿಗೆ ತನ್ನ ವಾರ್ಡಿನ ಸಮಸ್ಯೆಗಳು ಏನು ಎಂಬುದೇ ಅರಿವಿರುವದಿಲ್ಲ. 

ಈ ಬಾರಿ ಮತದಾರ ನಿಜಕ್ಕೂ ಗೊಂಧಲಕ್ಕೆ ಒಳಗಾಗಿ ಬಿಟ್ಟಿದ್ದಾನೆ.ಯಾಕೆ ಗೊತ್ತಾ..? ವಿಧಾನಸಭೆ ಚುನಾವಣೆಯ ಸಮಯದಲ್ಲಿ ಮತ ಕೇಳಿಕೊಂಡು ಮನೆಬಾಗಿಲಿಗೆ ಬರುವ ಅಭ್ಯರ್ಥಿ ನಿಮ್ಮೆಲ್ಲ ಸಮಸ್ಯೆಗಳನ್ನ ನಿವಾರಿಸುತ್ತೇನೆ ಎಂದವನು , ಲೋಕಸಭೆ ಚುನಾವಣೆ ಸಮಯದಲ್ಲಿ ಮನೆ ಬಾಗಿಲಿಗೆ ಬರುವ ಅಭ್ಯರ್ಥಿ , ಹಾಗೆ ಪಂಚಾಯತ ಚುನಾವಣೆ ಸಮಯದಲ್ಲಿ ಮತ್ತೆ ಮನೆ ಬಾಗಿಲಿಗೆ ಓಟು ಕೇಳಿಕೊಂಡು ಬರುವ ಅಭ್ಯರ್ಥಿಗಳು ಹಲವಾರು ತರದ ಆಶ್ವಾಸನೆಯನ್ನು ಕೊಟ್ಟು ಓಟು ಪಡೆದುಕೊಂಡು ಹೋದವರು ಮತ್ತೆ ಇತ್ತ ತಿರುಗಿಯೂ ನೋಡುವದಿಲ್ಲ ಇನ್ನು ನಮ್ಮ ನಮ್ಮ ಸಮಸ್ಯೆಗಳು ನಮ್ಮ ಮನೆಯಂಗಳದಲ್ಲಿ ಹಾಗೆ ಉಳಿದು ಬಿಡುತ್ತವೆ. ಮತದಾರ ನಂಬುವದಾದರು ಯಾರನ್ನ..? ಇಂದಿನ ಹೆಚ್ಚಿನ ಸಂಖ್ಯೆಯ ತರುಣರಿಗೆ ಮೂಲ ಸಮಸ್ಯೆಗಳ ಅರಿವೇ ಆಗುವದಿಲ್ಲ ಯಾಕೆ ಅಂತೀರಾ.? ಅವರು ಯಾವತ್ತಿಗೂ ಕೂಡ ರೇಷನ್ ಅಂಗಡಿಯಲ್ಲಿ ತಿಂಗಳಿಗೊಮ್ಮೆ ಸಾಲುಗಟ್ಟಿ ನಿಂತವರಲ್ಲ , ಸರಕಾರಿ ಕಛೇರಿಗಳಲ್ಲಿ ಯಾವದೋ ಒಂದು ಮನೆಯ ಕೆಲಸವನ್ನಿಟ್ಟುಕೊಂಡು ಓಡಾಡಿದವರಲ್ಲ , ತಾರುಣ್ಯ (ಆರೋಗ್ಯ) ಘಟ್ಟಿಯಾಗಿರುವದರಿಂದ ಆಸ್ಪತ್ರೆ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ಹೋಗಿ ಬಂದವರಲ್ಲ , ಅಂದಾಗ ನಿಜವಾದ ಸಮಸ್ಯೆಯ ಅರಿವಾಗೋದಾದ್ರು ಹೇಗೆ..? ಇವೆಲ್ಲ ಕೆಲಸಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಮನೆಯಲ್ಲಿನ ಹಿರಿಯರೇ ಅಲ್ಲವೇ ಮಾಡುವದು. 

ಈಗ ಮತ್ತೆ ಪಟ್ಟಣ ಪಂಚಾಯತ್ ನ ಚುನಾವಣೆಗಳು ನಮ್ಮ ಎದುರಿಗೆ ಬಂದು ನಿಂತಿವೆ , ಮನೆಯ ಅಂಗಳದಲ್ಲಿ ಮತ್ತೆ ಅಭ್ಯರ್ಥಿಗಳ ಓಡಾಟ ಶುರುವಾಗಿದೆ ನಿಮ್ಮ ಮತಗಳನ್ನು ಕೇಳಿಕೊಂಡು . ಈ ಬಾರಿ ಸುಮ್ಮನೆ ಕೂರಬೇಡಿ ನಿಮ್ಮ ಸಮಸ್ಯೆಗಳ ಪಟ್ಟಿಯನ್ನು ಮಾಡಿ ಮನೆಬಾಗಿಲಿಗೆ ಬರುವ ಆ ಅಭ್ಯರ್ಥಿಯ ಮುಂದೆ ಹಿಡಿಯರಿ ಇವಗಳನ್ನು ಮಾಡುವದಾದರೆ ಮತ ನೀಡುತ್ತೆಂದು ಹೇಳಿ ಕಳಿಸಿ. ಈಗಂತೂ ಸೋಶಿಯಲ್ ಮಿಡಿಯಾದಲ್ಲಿ ಬಹುತೇಕ ಎಲ್ಲ ಅಭ್ಯರ್ಥಿಗಳು ತಮ್ಮ ತಮ್ಮ ಖಾತೆಗಳನ್ನ ಹೊಂದಿದ್ದಾರೆ , ಹೇಳಿದ ಕೆಲಸ ನಡೆಯಲಿಲ್ಲವೆಂದರೆ ನೀವು ಆತನನ್ನು ಹುಡುಕಿಕೊಂಡು ಹೋಗುವ ಕಷ್ಟವೇ ಬೇಡ ಕೂತ ಜಾಗದಲ್ಲಿಂದಲೇ ನೀವು ತೆಗೆದ ಒಂದು ಫೋಟೋ ಜೊತೆಗೆ ಸಾರ್ವಜನಿಕವಾಗಿಯೇ ನೀವು ಸವಾಲು ಮಾಡಬಹುದು. ಆದರೆ ಇದೆಲ್ಲ ಮಾಡುವ ಮೊದಲು ಎರಡು ಬಹುಮುಖ್ಯ ಕೆಲಸಗಳನ್ನು ನೀವು ತಪ್ಪದೆ ಮಾಡಿರಲೇಬೇಕು ಮೊದಲನೆಯದು ನಿಮ್ಮ ಸಮಸ್ಯೆಗಳ ಪಟ್ಟಿಯನ್ನ ಆತನ ಎದುರಿಗೆ ಒಪ್ಪಿಸಿರಬೇಕು , ಯಾವುದೇ ಆಮಿಷಗಳಿಗೆ ಒಳಗಾಗದೆ ಸೂಕ್ತ ಅಭ್ಯರ್ಥಿಗೆ ನೀವು ನಿಮ್ಮ ಮತವನ್ನು ನೀಡಿರಬೇಕು. ಅಸಲಿಗೆ ನನ್ನ ಪ್ರಶ್ನೆ ಶುರುವಾಗುವದೇ ಇಲ್ಲಿಂದ ಈ ಮೊದಲಿನ ಚುನಾವಣೆಗಳಲ್ಲಿ ನಾನು ರಸ್ತೆ ಮಾಡುತ್ತೇನೆ , ಚರಂಡಿ ಕಟ್ಟಿಸುತ್ತೇನೆ , ವಿದ್ಯುತ್ ಹಾಕಿಸುತ್ತೇನೆ ಎಂದೆಲ್ಲ ಮತ ಕೇಳಿಕೊಳ್ಳುತ್ತಿದ್ದುರು .ಈಗ ಮುಂಡಗೋಡಿನ ಬಹುತೇಕ ರಸ್ತೆಗಳು ಕಾಂಕ್ರೀಟಿನ ರಸ್ತೆಗಳಾಗಿವೆ , ಚರಂಡಿಗಳು ನಿರ್ಮಿತವಾಗಿವೆ , ವಿದ್ಯುತ್ ಇಲ್ಲದ ಮನೆಯನ್ನ ಹುಡುಕಬೇಕಷ್ಟೆ , ಇದಾಗಲೇ ನೀರಿನ ಸಂಪರ್ಕದ ಪೈಪುಗಳನ್ನ ಅಳವಡಿಸಲಾಗುತ್ತದೆ, ಹಾಗಾದ್ರೆ ಈ ಬಾರಿ ಚುನಾಯಿತ ಅಭ್ಯರ್ಥಿ ಮಾಡುವ ಕೆಲಸವಾದ್ರೂ ಎನೂ ಎಂಬುದು ನಿಜಕ್ಕೂ ಕೂತೂಹಲವಾಗಿದೆ.ಅಥವಾ ಇನ್ಯಾವ ಕೆಲಸಗಳನ್ನ ಅವರು ಮಾಡಬಹುದು ಎಂಬುದು ದಯಮಾಡಿ ಕಮೆಂಟುಗಳಲಿ ತಿಳಿಸಿ. 
ಒಂದಿಷ್ಟು ನನ್ನ ಅನಿಸಿಕೆಯ ಪ್ರಕಾರ ಈ ಚಾಲೆಂಜ್ ಗಳನ್ನ ಕೈಗೆತ್ತಿಗೊಳ್ಳಬಹುದು ಇನ್ನೂ ಎಷ್ಟು ವರ್ಷ ಅಂತ ರಸ್ತೆ , ನೀರು ,ಅವು ಇವು ಅಂತ ರಾಜಕೀಯ ಮಾಡ್ತೀರಿ ಆಚೆ ಬನ್ನಿ ಇಲ್ಲಿಂದ ಒಂದಿಷ್ಟು ಮುಂದಕ್ಕೆ ಹೋಗೋಣ 
● ಬಯಲು ಶೌಚ ಮುಕ್ತ ಮುಂಡಗೋಡ 
● ಡಿಜಿಟಲ್ ಮುಂಡಗೋಡ ಮಾಡುವತ್ತ ಕೆಲಸ ಮಾಡುವದು 
● ಹೊಗೆ ಮುಕ್ತ ಮುಂಡಗೋಡ . ಅಂದರೆ ಪ್ರತಿ ಮನೆಯಲ್ಲೂ LPG ಗ್ಯಾಸ್ ನ ಬಳಕೆಯಾಗುವದು 
● ನಿರೋಗಿ ಮುಂಡಗೋಡ - ಸ್ವಚ್ಛತೆಯ ಕಡೆ ಗಮನ ಹರಿಸುತ್ತ ಆರೋಗ್ಯದ ಅಭಿವೃದ್ಧಿಯ ಏನೇನೋ ಕಾರ್ಯಯೋಜನೆಗಳು ಆಗಬೇಕು ಎಂಬುದನ್ನ ಆಲೋಚಿಸುವದು 
● ಶಿಕ್ಷಣದ ಅಭಿವೃದ್ಧಿಯ ಗಮನ ಹರಿಸುವದು 
ಈ ಮೇಲೆ ಹೇಳಿದಂತ ಯಾವ ಕೆಲಸಗಳು ಸಹ ಅಂತಹ ಕಷ್ಟಕರವಾದದಲ್ಲ ಒಂದಿಷ್ಟು ಪ್ರಯತ್ನ ಪಟ್ಟರೆ ಎಲ್ಲವನ್ನು ಸಹ 100% ನಷ್ಟು ಮಾಡಿ ಮುಗಿಸಬಹುದು. ಈ ಬಾರಿ ನಿಮ್ಮ ಮತ ನೀಡುವಾಗ ಇವೆಲ್ಲ ಅಂಶಗಳು ಸಹ ಗಮನದಲ್ಲಿರಲಿ. 
(2018-Aug-22)

ಪವನ್ H 
ಮುಂಡಗೋಡ